ವಿಷಯಕ್ಕೆ ಹೋಗಿ

ಅವಳು ಬಂದಿದ್ದಾಳೆ - ಕವಿತೆ - ದೀಕ್ಷಿತ್ ನಾಯರ್


ಅವಳು ಬಂದಿದ್ದಾಳೆ..!


ಅವಳಿಗೋ ನನ್ನೆಡೆಗೆ ತುಸುವೂ
ಅಕ್ಕಸವಿಲ್ಲ; 
ತಿಂಗಳಾಗುವುದೇ ತಡ ಬಗೆ ಬಗೆಯ ಠರಾವುಗಳೊಂದಿಗೆ ಲಗ್ಗೆ ಹಾಕಿ ಬಿಡುತ್ತಾಳೆ;
ಜೊತೆಯಲ್ಲಿ ಸಾವಿನ ಪ್ರಲಾಪದ ಬೆರಗಿನಂತಹ ವಿಪರೀತ ಬೇನೆಯನ್ನೂ ತಂದಿರುತ್ತಾಳೆ


ಅವಳೋ ಜನ ಜಾಗಗಳಿಗೆ ಹೆದರುವವಳಲ್ಲ
ಬುಳ ಬುಳನೆ ಹರಿದು ಬಿಡುತ್ತಾಳೆ ಎವೆಯಿಕ್ಕದೆ ಕಾಲಿನ ಸಂಧಿಗಳಲ್ಲಿ;
ಒಳ ಉಡುಪಿನ ಆಕಾರವೇ ಬದಲಾಗಿ ಹೋಗಬೇಕು ಅಷ್ಟು ಒದ್ದೆ ಮಾಡುತ್ತಾಳೆ;
ನೀಲಿ,ಕಪ್ಪು,ಹಳದಿ ಏನೇ ಇರಲಿ ಅವಳ ಹಾವಳಿಗೆ ಅದು ಸಂಪೂರ್ಣವಾಗಿ ಕೆಂಪಗಾಗಿರುತ್ತದೆ


ಅಬ್ಬಾ! ಅವಳು ಏಳು ದಿನವಾದರೂ ಸುಮ್ಮನಾಗದ ಮಹಾಕಾಳಿ;
ಇಟ್ಟ ಕಣ್ಣೀರ ಹನಿಗಳೆಲ್ಲವೂ ವರ್ಜ್ಯ ಅವಳ ಮುಂದೆ
ಒಂದೇ ಸಮನೆ ಮೊರೆಯುತ್ತಾಳೆ ಘಂಟೆಯಂತೆ;
ಕ್ಷಣ ಕ್ಷಣವೂ ಹಾಸಿಗೆಯ ಮಗ್ಗಲು ಬದಲಿಸುವಂತೆ ಮಾಡುತ್ತಾಳೆ
ನಾಭಿಯಾಳದಲ್ಲಿ ಚಳುಕುಗಳೊಂದಿಗೆ ಗಿರಕಿಯೂ ಹೊಡೆಯುತ್ತಾಳೆ;
ಛೀ.. ಬಿಡಿ ಅವಳು ನನ್ನಂಥಲ್ಲವಲ್ಲ? ಅದಕ್ಕೆ ನನ್ನೆಡೆಗೆ ಒಲವಿಲ್ಲ


ಮೂಗಿನ ಹೊಳ್ಳೆಗಳೆರಡನ್ನು ಹೊಲಿದು ಹಾಕಿದರೂ ವ್ಯರ್ಥವೇ ಅಷ್ಟು ನಾರುತ್ತಾಳೆ;
ನನ್ನಲ್ಲಿಯೇ ಹೇವರಿಕೆ ಹುಟ್ಟಬೇಕು ಹಾಗೆ ಮಾಡುತ್ತಾಳೆ
ಕೆಲವೊಮ್ಮೆಯಂತೂ ನನ್ನ ಮರ್ಯಾದೆಗೆ ತಿಲಾಂಜಲಿ ಬಿಡುತ್ತಾಳೆ;
ತರ್ಕ ಹೀನ ಜಗತ್ತಿನಲ್ಲಿ ತಲೆ ತಗ್ಗಿಸುವಂತೆ ಮಾಡುತ್ತಾಳೆ
ಮೈಯ್ಯ ಸತುವನ್ನೆಲ್ಲಾ ನಿಷ್ಕ್ರಿಯಗೊಳಿಸಿ,ನನ್ನ ನಾಲಿಗೆಯನ್ನೂ ಅಟ್ಟೆಯಾಗಿಸಿ ಗಹಗಹಿಸಿ ನಗುತ್ತಾಳೆ


ಅವಳ ಘೀಳಾಟಗಳನ್ನು ಸೈರಿಸದ ನಾನೋ ಹೇಳಿಯೇ ಬಿಡುತ್ತೇನೆ " ಹೋಗು ದೂರ ಇನ್ನೆಷ್ಟು ದಿನ ಹೀಗೆ ಸಾಯಲಿ?" ಎಂದು;
ಅವಳೂ ಪಾಪ ನಿರುಮ್ಮಳವಾಗಿಯೇ ಉತ್ತರಿಸುತ್ತಾಳೆ
"ಅಯ್ಯೋ! ಹೆಣ್ಣೆ, ನಾನಿದ್ದರಲ್ಲವೇ ನಿನಗೆ ಹೆಣ್ತನ ಮತ್ತು ತಾಯ್ತನ; ನಾನಿದ್ದರಲ್ಲವೇ ಕಚ್ಚೆ ಹರುಕರು ತಹ ತಹಿಸಿ ನಿನ್ನಡೆಗೆ ಸುಳಿಯುವುದು
ಕೇಳಿಲ್ಲಿ ನಾನಿಲ್ಲದಿದ್ದರೆ ನಿನ್ನ ನಸೀಬು ಖೊಟ್ಟಿಯಾಗುತ್ತಿತ್ತು;
ಮತ್ತೂ ಹೇಳುವೆ ಕೇಳು ನಾನಿಲ್ಲದಿದ್ದರೆ ನೀನು ಹೆಣದ ಮೇಲಿನ ಹೂವು!" 
ಆಗ ನಾನು ದೊರಗು ದನಿಯಲ್ಲಿಯೇ " ಆಯ್ತು ಬಾ ಮಾರಾಯ್ತಿ ನಿನಗೆ ಹೃದಯ ತುಂಬಿದ ಸ್ವಾಗತ" ಎಂದು ನಿಚ್ಚಳವಾಗಿ ಹೇಳಿ ಬಿಡುತ್ತೇನೆ


ಆದರೂ ಅವಳು ಬಂದಾಗ ನಾನು ನಾನಾಗಿ ಇರುವುದೇ ಇಲ್ಲ;
ಪಾಪಿಗೇಡಿ ಅವಳು ಈ ಬಾರಿ ಒಂದು ವಾರದ ಮುಂಚೆಯೇ ಬಂದಿದ್ದಾಳೆ!..


ದೀಕ್ಷಿತ್ ನಾಯರ್
ಯುವ ವಾಗ್ಮಿ, ಯುವ ಬರಹಗಾರ & ನಿರೂಪಕ
ಮಂಡ್ಯ


ಕಾಮೆಂಟ್‌ಗಳು

  1. ಹೆಣ್ಣಿನ ನೋವನ್ನು ಹೆಕ್ಕಿ ಬರೆದಂತೆ ಇದೆ ಕವನ ಹೃದಯ ತುಂಬಿದ ಸ್ವಾಗತ ನೀಡದೆ ಇದ್ದರು ಬಂದೆ ಬರುತ್ತಾಳೆ ಅವಳು. ಅವಳು ಇಲ್ಲದೆ ಇದ್ದರೆ ಹೆಣ್ಣಿನ ಅಸ್ತಿತ್ವ ಇಲ್ಲವೇ ಇಲ್ಲ. ತುಂಬಾ ಚೆಂದದ ರಚನೆ ದೀಕ್ಷಿತ್ ಜೀ.

    ಪ್ರತ್ಯುತ್ತರಅಳಿಸಿ
  2. ಪ್ರತಿ ಬಾರಿ ಹೆಣ್ಣಿನ ಮನದ ಭಾವನೆ ಯಾತನೆಗಳ ಒಳಹೊಕ್ಕು ಬರೆಯುವ ತಮ್ಮ ಕವನ 👌👌👌

    ಪ್ರತ್ಯುತ್ತರಅಳಿಸಿ
  3. ಹೆಣ್ಣಿನ ಮನದಾಳದ ಮಾತನ್ನು ಅದ್ಬುತವಾಗಿ ವ್ಯಕ್ತಪಡಿಸಿದ್ದೀರಿ. ನಿಮ್ಮಲ್ಲಿನ ಹೆಣ್ತನದ ಮನಸ್ಸಿಗೆ ನನ್ನ ಸಲಾಂ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

Avva Pustakalaya

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು 2020 ರ ಏಪ್ರಿಲ್ 04 ರಂದು ಶ್ರೀಮಾನ್ ಲೇಟ್ ನಾರಸಯ್ಯ ಅವರ ಸ್ಮರಣಾರ್ಥವಾಗಿ ರೂಪುಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಓದುಗರ ಬಳಗವನ್ನು ಹೊಂದಿದೆ. ಇದು ಡಿಜಿಠಲ್ ಗ್ರಂಥಾಲಯವಾಗಿದ್ದು, ಓದಿನ ಅಭಿರುಚಿ ಹಬ್ಬಿಸಲು ಬಹಳಷ್ಟು ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ಜುಲೈ ತಿಂಗಳಲ್ಲಿ ಪ್ರಕಟಿತ ಕೃತಿಗಳನ್ನು ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಆಹ್ವಾನಿಸಲಾಗುವುದು. ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿಯ ಜೊತೆಗೆ ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಹಂಚಿ, ಅವರ ಪುಸ್ತಕಗಳನ್ನು ಅವ್ವ ಪುಸ್ತಕಾಲಯ ವೇದಿಕೆಯ ಮುಖೇನ ಓದುಗರಿಗೆ ಮುಟ್ಟಿಸಲಾಗುವುದು . ಈಗಾಗಲೇ ಅವ್ವ ಪುಸ್ತಕಾಲಯದಿಂದ ಪ್ರಧಾನ ಕಾರ್ಯದರ್ಶಿಗಳಾದ  ಯುವಲೇಖಕ ಅನಂತ ಅವರ ಮೂರು ಕೃತಿಗಳು ಪ್ರಕಟವಾಗಿದ್ದು ಅವುಗಳು ಓದುಗರಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಓದುಗರು ನಮ್ಮನ್ನು ಸಂಪರ್ಕಿಸುವ ಮೂಲಕ ಪುಸ್ತಕಗಳನ್ನು ಕೊಂಡು ಓದಬಹುದು. ಮತ್ತು ನಮ್ಮ ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. 1). ಅವ್ವ ಪುಸ್ತಕಾಲಯ #189, ಕೆಂಚನಹಳ್ಳಿ ಅಂಚೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು - 572123 ಮೊ : 8548948660 Mail :  avvapustakaalaya@gmail.com 2).  Facebook....