ವಿಷಯಕ್ಕೆ ಹೋಗಿ

ಮಂಗಳಮುಖಿ ನಾನು, ಮೃತ್ಯುಸಖಿಯಲ್ಲ! - ಕವಿತೆ - ದೀಕ್ಷಿತ್ ನಾಯರ್


ಮಂಗಳಮುಖಿ ನಾನು ಮೃತ್ಯುಸಖಿಯಲ್ಲ

(ಆತ್ಮೀಯರಾದ ರಾಧಿಕಾ ರವರ ಜೀವನಾಧಾರಿತ)

ಕಪಟವ ಅರಿಯದವಳು ನನ್ನಮ್ಮ;
ಆಕೆಯ ಪ್ರಾರ್ಥನೆಗೆ ಮನಸೋತು ನನ್ನನ್ನು ಮಡಿಲಿಗಿರಿಸಿದ್ದ ಆ ದೇವ!
"ವಂಶವ ಬೆಳಗುವ ಕುವರನಿವನೋ"
ಎಂದು ಬೀಗುತ್ತಾ ಇಡೀ
ಊರಿಗೆ ಸಿಹಿಯ ಹಂಚಿದ್ದನಂತೆ
ನನ್ನ ಮಾವ

ಎಲ್ಲ ಶಿಶುವಿನಂತೆ ತೆವಳಿದೆ
ಕಾರಿದೆ, ಗುಡುಗು,ಸಿಡಿಲು
ಮಿಂಚುಗಳಿಗೆ ತತ್ತರಿಸುತ್ತಿದ್ದೆ
ಅಮ್ಮನ ಗೊಗ್ಗರು ದನಿಯ
ಲಾಲಿ ಹಾಡಿಗೂ ಖಿಲ್ಲೆನ್ನುತ್ತಿದೆ

ನಡಿಗೆಯಲ್ಲಿ ವ್ಯತ್ಯಾಸವಿರಲಿಲ್ಲ
ದನಿಯೂ ಲಯ ಬದ್ಧವಾಗಿತ್ತು
ಆದರೆ ಹನ್ನೆರಡು ದಾಟುವ 
ವೇಳೆಗೆ ಮಾಂಸಲಗಳು ದಷ್ಠ
ಪುಷ್ಟವಾಗಿ ಬೆಳೆದು ಬಿಟ್ಟಿತ್ತು

ಕಾಡಿಗೆ,ಕುಂಕುಮ,ಬಳೆ ಮತ್ತು
ಸರಗಳೆಂದರೆ  ಅದೆಂತಹದ್ದೋ
ಮೋಹ
ದಿಢೀರ್ ಬದಲಾವಣೆಗೆ 
ಖಿನ್ನತೆಯಂತೂ ಕಾಡಲಿಲ್ಲ
ಆದರೆ ಸಂಗಡಿಗರ ಮಾತಿಗೆ
ಇಬ್ಬನಿ ಏಟಿಗೆ ತತ್ತರಿಸಿ ಹೋದ
ಹೂವಿನ ಪಕಳೆಯಂತಾಗಿದ್ದೆ

ಪೋಷಕರು ಗರ ಬಡಿದು
ಗಂವ್ವೆನ್ನುತ್ತಿದ್ದ ಕತ್ತಲೆ ಕೋಣೆಗೆ
ದೂಡಿ ಬಿಟ್ಟಿದ್ದರು
ಗಂಡಸ್ತನ ತೋರಿಸುವ 
ಆ ಭಾಗದ ನಿಮಿರುವಿಕೆಯು
ನಿಂತು ಹೋಗಿತ್ತು

ದಿನ ಕಳೆದಂತೆ ರಸ್ತೆಗಿಳಿದು ಬಿಟ್ಟೆ
ಕೈ ತಟ್ಟುತ್ತಾ; 
ಬಸ್ಸಿನಲ್ಲಿ ಒತ್ತರಿಸಿದರು,
ಸೆರಗಿನೊಳಗೆ ಕೈ ತೂರಿಸಿದರು,
ಕೋಜ,ಮಾಮ,ಮಂಗಳಮುಖಿ 
ಎಂದರು ಹೌದು
 ಆದರೆ ನಾನು ಮೃತ್ಯು ಸಖಿಯಲ್ಲ

ಗಂಡಸಂತೆ ಹಣ್ಣಿನ ಬೆನ್ನ ಮೇಲೆ
ಶೃಂಗಾರದ ಚಿತ್ರ ಬಿಡಿಸಲಾಗಲಿಲ್ಲ
ಹೆಣ್ಣಿನ ಸ್ಥಾನಮಾನವೂ
ಸಮಾಜದಲ್ಲಿ ಸಿಗಲಿಲ್ಲ
ಹೇಳಿದೆನಲ್ಲ ನಾನು ಮಂಗಳಮುಖಿ
ಆದರೆ ಮೃತ್ಯು ಸಖಿಯಲ್ಲ

ಕಾಮಕ್ಕೆ ಪರ್ಯಾಯ ಮಾರ್ಗವ 
ನನ್ನಲ್ಲಿ 
ಹುಡುಕಿದರು ಅದೆಷ್ಟೋ
ಜನ;
ಮೃಗದಂತೆ ಪರಚಿ ಇಷ್ಟ
ಬಂದಂತೆ ಉಂಡು ಮುಗಿಸಿ
ಕೈ ತೊಳೆದು 
ನಡೆದು ಬಿಟ್ಟರು;
ಸುಖದ ವಾಂಛೆಯ ನೀಗಿಸಿಕೊಂಡು ಮಂಗಳಮುಖಿ
ಎಂದು ಬಿಟ್ಟರು
ಹೌದು ಆದರೆ ನಾನು
ಮೃತ್ಯು ಸಖಿಯಲ್ಲ

ನಿರ್ಮಾನುಷ ಜಾಗಗಳೆಡೆಗೆ
ಅಂಜದೆ ಹೆಜ್ಜೆ ಹಾಕುವೆ;
ಭಯವೆಂಬುದು ಎಂದೋ
ಸತ್ತು ಹೋಗಿದೆ
ಮೊರೆವ ಪ್ರೀತಿಯ ಘಂಟೆಯು
ನಿಂತು ಹೋಗಿದೆ
ಭಗ ಭಗನೆ ಉರಿವ ನೆನಪುಗಳೊಂದಿಗೆ
ಸಾಗುತ್ತಿರುವೆ
ನಾನು ಮಂಗಳಮುಖಿ
ಆದರೆ ಮೃತ್ಯು ಸಖಿಯಲ್ಲ

         ದೀಕ್ಷಿತ್ ನಾಯರ್, ಮಂಡ್ಯ
ಯುವ ವಾಗ್ಮಿ, ಬರಹಗಾರ ಮತ್ತು ನಿರೂಪಕ

ಕಾಮೆಂಟ್‌ಗಳು

  1. ಮಂಗಳಮುಖಿಯರ ಬವಣೆಗಳನು ಚಿತ್ರಿಸುವ ಕವನ ಚೆಂದವಿದೆ

    ಪ್ರತ್ಯುತ್ತರಅಳಿಸಿ


  2. ಅರ್ಥಗರ್ಭಿತವಾಗಿದೆ ಸರ್...... ವಾಸ್ತವದ ಚಿತ್ರಣ ಅದ್ಭುತವಾಗಿದೆ.....ಒಳ್ಳೆಯ ಬರಹ

    ಪ್ರತ್ಯುತ್ತರಅಳಿಸಿ

  3. ಉತ್ತಮ ಬರಹ... ಶೀರ್ಷಿಕೆ ತುಂಬಾ ಇಸ್ಟ ಆಯ್ತು

    ಪ್ರತ್ಯುತ್ತರಅಳಿಸಿ
  4. ನಿಜ, ಅದೇಕೋ ನಮ್ಮ ಸಮಾಜ ಮಂಗಳಮುಖಿಯರನ್ನು ಮೃತ್ಯು ಸಖಿಯೇನೋ ಎಂಬಂತೆ ನೋಡುತ್ತಾರೆ. ಆಕೆಯದೇನು ತಪ್ಪು? ಎಲ್ಲರಂತೆ ಅವರೂ ಜನ್ಮ ತಳೆಯುತ್ತಾರೆ. ಬೆಳೆಯುತ್ತಿದ್ದಂತೆ ಹಾರ್ಮೋನುಗಳ ವ್ಯತ್ಯಯದಿಂದಾಗಿ ಬದಲಾಗುತ್ತಾರೆ. ಮಂಗಳ ಮುಖಿಯಾದರೇನು ಅವರಿಗೂ ನಮ್ಮಂತೆ ಜೀವವಿದೆ, ಆ ಜೀವದೊಳಗೆ ಮಿಡಿವ ಭಾವವಿದೆ ಅನ್ನೋದನ್ನ ಸಮಾಜದ ತುಂಬಾ ಜನ ಅರ್ಥ ಮಾಡ್ಕೊಳ್ಳೋದೇ ಇಲ್ಲಾ. ಅವರ ನೋವುಗಳಿಗೆ ದನಿಯಾದಂತಿದೆ ನಿಮ್ಮ ಕವನ. ನಿಮ್ಮ ಹರಿತ ಲೇಖನಿಯಿಂದ ಇಂತಹವರ ಮೇಲೆ ಬೆಳಕು ಚೆಲ್ಲುವಂತಹ ಇನ್ನಷ್ಟು ಬರಹಗಳು ಹೊರಹೊಮ್ಮಲ್ಲಿ ಎಂಬ ಆಶಯದೊಂದಿಗೆ ನಮನಗಳು 🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ