ವಿಷಯಕ್ಕೆ ಹೋಗಿ

ಇಳಿಸಂಜೆಯಲಿ ಮರೆಯಾದ ಕಿರಣ - ಲೇಖನ - ನಂದಾದೀಪ


ಕಾಫಿ ಆಯ್ತಾ.. ಎನ್ನುತ್ತಲೇ ಇಳಿಸಂಜೆಯಲಿ ಮರೆಯಾದ ಕಿರಣ

ಎದೆಯ ಗೂಡಿನಲಿ ಭಾವನೆಯ ದೀಪ ಹೊತ್ತಿಸಿ, ಒಲವಿನ ಕಿರಣವ ಎಲ್ಲೆಡೆ ಹರಡಿ ತಮ್ಮ ಸತ್ಕಾರ್ಯದ, ಸವಿ ಮಾತಿನಲೆ ಎಲ್ಲರ ಮನದಲಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡ ಕವಿ, ಲೇಖಕ, ಚಿತ್ರಕಲಾವಿದ, ಕಾದಂಬರಿಕಾರರು ಕಿರಣ ದೇಸಾಯಿಯವರು..

ಇವರು 17-07-1981ರಲ್ಲಿ ಬೆಳಗಾವಿಯ ಕಿತ್ತೂರಿನಲ್ಲಿ ಜನಿಸಿದರಾದರು.. ಬೆಳೆದಿದ್ದು ಮಾತ್ರ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ.. ತಂದೆ ಭಾಳಸಾಹೇಬ ದೇಸಾಯಿ, ತಾಯಿ ಲಕ್ಷ್ಮಿಬಾಯಿ ದೇಸಾಯಿ.. ವಿದ್ಯಾ ಪ್ರಸಾರಕ ಸಮಿತಿಯ C S ಬೆಂಬಳಗಿ ಕಲಾ ಕಾಲೇಜು, ರಾಮದುರ್ಗದಲ್ಲಿ ಬಿ. ಎ, ಬಿ. ಎಡ್ ವ್ಯಾಸಂಗ ಮಾಡಿರುವ ಇವರು.. ಎಂ. ಎ( ಇತಿಹಾಸ) ಪದವಿಯನ್ನು ಪೂರೈಸುವುದರಲ್ಲಿದ್ದರು!

ತಮ್ಮ ಕಾಲೇಜಿನ ದಿನಗಳಲ್ಲೇ ಕವನ, ಚುಟುಕು ಬರೆಯುವ ಹವ್ಯಾಸವಿದ್ದ ಇವರು ಚಿತ್ರಕಲೆಯಲ್ಲಿ ನಿಪುಣರಾಗಿ ಹೆಸರು ಪಡೆದಿದ್ದರು.. ಬರೆಯುವ ಹವ್ಯಾಸವನ್ನು ಹಾಗೆ ಮುಂದುವರೆಸಿಕೊಂಡು ಬಂದಿದ್ದ ಇವರು ಒಂದು ಖಾಸಗಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದು ಕೆಲವು ದಿನದ ನಂತರ ತಮ್ಮ ಕರ್ತವ್ಯವನ್ನು ತ್ಯಜಿಸಿ ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಿದರು.. ಎಷ್ಟೋ ಆಶ್ರಮಗಳಿಗೆ ತಮಗಾದ ಸಹಾಯ ಮಾಡಿ.. ಕೆಲವು ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡವರು.. ಅವರೂರಿನ ಶಾಲೆಗಳಿಗೆ ನಿರ್ದೇಶಕರಾಗಿ ಅಲ್ಲಿನ ಮಕ್ಕಳಿಗೆ ಪ್ರೇರಣಾ ತರಗತಿಗಳನ್ನು ನಡೆಸಿದ್ದಾರೆ..

ಭೂತಕಾಲದ ಬಗ್ಗೆ ಚಿಂತಿಸದೆ, ಭವಿಷ್ಯದ ಭಯವಿಲ್ಲದೆ ಸದಾ ವರ್ತಮಾನದಲ್ಲಿ ಹಸನ್ಮುಖಿಯಾಗಿ ಬದುಕಿದ ಇವರು *ನಾನಿದ್ದೀನಿ* ಎಂದು ಹೇಳುತ್ತಲೇ ಅದೆಷ್ಟೋ ಸ್ನೇಹವನ್ನು ಸಂಪಾದಿಸಿ ನೊಂದ ಮನಸುಗಳಿಗೆ ತಮ್ಮ ಮಾತಿನ ಮೂಲಕವೇ ಭರವಸೆಯ ಕಿರಣವಾಗಿ ಬೆಳಕಾಗಿದ್ದರು.. ಅವರ ಸಮಸ್ಯೆಗಳ ಜೊತೆ ನಿಂತು ಅದರ ಪಾಲುದಾರನಾಗಿ ಬೆಂಬಲ ನೀಡುತ್ತಿದ್ದರು.. ನಾವು ಏನನ್ನು ಮಾಡುತ್ತೇವೆಯೋ ಅದೇ ಮರಳಿ ಬರುತ್ತದೆ.. ಪ್ರೀತಿ ಹಂಚು ಪ್ರೀತಿ ಮರಳಿ ಬರುತ್ತದೆ.. ಎನ್ನುತ್ತಿದ್ದ ಅವರ ಮಾತಿನಂತೆಯೇ, ಅವರು ಕೊಟ್ಟ ಸಹಕಾರ, ಸಹಾಯ ಅವರ ಅನಾರೋಗ್ಯದ ಸ್ಥಿತಿಯಲ್ಲಿ ಆ ಪ್ರೀತಿ, ಸಹಕಾರ, ಸಹಾಯ ಮರಳಿ ಬಂದಿದ್ದು ನಿಜಕ್ಕೂ ಸೋಜಿಗ!


ಮೊದ ಮೊದಲು ಕೇವಲ ಹಾಳೆಗಷ್ಟೇ ಸೀಮಿತವಾಗಿದ್ದ ಅವರ ಕವಿತೆಗಳು ಹಾಗೂ ಹುಟ್ಟುಹಬ್ಬದ ವಿಶೇಷವಾಗಿ ಸ್ನೇಹಿತರಿಗಾಗಿ ಬರೆಯುತ್ತಿದ್ದ ಕವಿತೆಗಳು.. ಕ್ರಮೇಣ ಫೇಸ್ಬುಕ್ ಲೋಕಕ್ಕೆ ಬಂದಿಳಿದವು.. ಫೇಸ್ಬುಕ್ ನಲ್ಲಿ ಶುರುವಾದ ಅವರ ಸಾಹಿತ್ಯ ಪಯಣದಿಂದ, ಸ್ನೇಹ ಮನಸಿನಿಂದ ಎಲ್ಲರ ಆತ್ಮೀಯರಾದರು.. ಒಂದೊಂದೇ ಹಂತವಾಗಿ ಬೆಳೆಯುತ್ತ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿದರು.. ಅದಷ್ಟೇ ಅಲ್ಲದೆ ಇವರ ನಿರೂಪಣೆ ಶೈಲಿಯನ್ನು ಮೆಚ್ಚಿ ಅನೇಕ ಕಾರ್ಯಕ್ರಮಗಳು ಇವರ ತೆಕ್ಕೆಗೆ ಬಂದವು..

ಕವನಗಳಿಗಷ್ಟೇ ಸೀಮಿತವಾಗದೆ ಇತಿಹಾಸದ ಮೇಲೆ ಒಲವಿದ್ದ ಕಾರಣ ಅನೇಕ ಇತಿಹಾಸದ ವಿಚಾರಗಳ ಕುರಿತು ಅಧ್ಯಯನ ನಡೆಸಿ ಹಲವು ಐತಿಹಾಸಿಕ ಲೇಖನಗಳನ್ನು ಬರೆದರು.. ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ವರ್ಷಕ್ಕೊಮ್ಮೆ ಎಲ್ಲಾ ಸ್ನೇಹಿತರನ್ನು ಭೇಟಿಯಾಗಿ ಅವರೂರಿನ ವಿಶೇಷ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷತೆಗಳನ್ನು ತಮ್ಮ ಬರಹದ ಮೂಲಕ ಪರಿಚಯಿಸುವ ಹವ್ಯಾಸ ಇವರದಾಗಿತ್ತು.. ಅಂತೆಯೇ ಅದೆಷ್ಟು ಪುಸ್ತಕಗಳನ್ನು ಓದಿದ್ದಾರೋ ಲೆಕ್ಕವಿಲ್ಲ.. ಪುಸ್ತಕ ಸಂಗ್ರಹವೆ ಇದೆ.. ಅವರ ಪುಸ್ತಕಗಳು ಅವರೂರಿನಲ್ಲಿ ಅವರ ನೆನಪಿನಲ್ಲಿ ಒಂದು ಗ್ರಂಥಾಲಯವಾದರೆ ಉತ್ತಮ! ಇದರ ಜೊತೆ ಜೊತೆಗೆ ಎಲೆ ಮರೆ ಕಾಯಿಯಂತಿರುವ ಅನೇಕ ಸಾಧಕರನ್ನು ಹುಡುಕಿ ಅವರ ಕುರಿತು ಲೇಖನಗಳನ್ನು ಬರೆದು ಜನರಿಗೆ ಪರಿಚಯಿಸುವ ಕೆಲಸ ಅವರ ಖುಷಿಯ ಸಂಗತಿಗಳಲ್ಲಿ ಒಂದು!

ಬಿಡುವಿನ ವೇಳೆಯಲ್ಲಿ ತಮ್ಮ ಮತ್ತೊಂದು ಆಪ್ತವಾದ, ಪ್ರಾಣವಾದ ಹಾಗೂ ಅನ್ನವಾಗಿದ್ದ ಹವ್ಯಾಸವೆಂದರೆ(ಕೆಲಸ) ಚಿತ್ರಕಲೆ..! ಮಂಡಲ ಆರ್ಟ್, ಪೆನ್ಸಿಲ್ ಆರ್ಟ್, ವಾಟರ್ ಕಲರ್ ಆರ್ಟ್, ಆರ್ಕಲೀಕ್ ಆರ್ಟ್, ಪುಟ್ಟ ಕಲ್ಲುಗಳ ಬಳಕೆ, ಚಿಗುರೆಲೆಯ ಬಳಕೆ ಮಾಡಿ ಇನ್ನೂ ಅನೇಕ ಚಿತ್ರಗಳನ್ನು ಬರೆಯುತ್ತಿದ್ದರು.. ಚಿತ್ರಕಲಾಮೇಳದಲ್ಲಿ ಪ್ರದರ್ಶನ ಮಾಡುವ ಅವರ ಕನಸು ನನಸಾಗಬೇಕು..!


ಹೀಗೆ ಉತ್ತಮ ಹವ್ಯಾಸಗಳೊಂದಿಗೆ ಬದುಕು ಸಾಗಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಣ್ಣ ಕತೆಗಳನ್ನು ಆಗೊಮ್ಮೆ ಈಗೊಮ್ಮೆ ಬರೆಯುತ್ತಿದ್ದ ಅವರು ತಮ್ಮ ಕಲ್ಪನೆಯ ನಾಯಕ ನಾಯಕಿ ರಾಘವ ಜಾನಕಿಯ ಹೆಸರಲ್ಲಿ *ಸಂಜೆಗೊಂದು ಗುಟುಕು* ಪ್ರೇಮ ಲೇಖನಗಳನ್ನು ಬರೆಯಲು ಆರಂಭಿಸಿ ಆ ಗುಟುಕುಗಳು ಓದುಗರ ಮನಸಿನಲ್ಲಿ ಸವಿ ಸ್ವಾದವಾಗಿ ಇಂದಿಗೂ ಉಳಿದಿವೆ.. ಪುಟ್ಟ ಪುಟ್ಟ ಲೇಖನದಂತಿದ್ದ ಆ ಗುಟುಕು ಜಾನಕಿಯ ಕಲ್ಪನೆಯಲ್ಲಿ *ಕಾಫಿ ಆಯ್ತಾ..* ಎನ್ನುವ ಕಾದಂಬರಿಯಾಗಿ 17-07-2021(ಅವರ ಹುಟ್ಟಿದ ದಿನ) ರಂದು  ಬಿಡುಗಡೆಗೊಂಡು ಅವರ ಕನಸು ನನಸಾಯಿತು..

ಇತ್ತೀಚೆಗಷ್ಟೇ ಆರ್ಟ್ ಟು ಹಾರ್ಟ್ ಎಂಬ ಯುಟ್ಯೂಬ್ ಚಾನೆಲ್ ಕೂಡ ಆರಂಭಿಸಿ ಚಿತ್ರಕಲೆಗಳ ಟೆಕ್ನಿಕ್ ಗಳನ್ನು ತಿಳಿಸುತ್ತಿದ್ದರು. ಅದಷ್ಟೇ ಅಲ್ಲದೆ ಅವರ ಹಲವಾರು ಕವನಗಳ ಒಂದು ಕವನ ಸಂಕಲನ, ಮತ್ತೆರಡು ಕಾದಂಬರಿಯಾದ ರಕ್ತ ಅಂಟಿದ ಹೆಜ್ಜೆ, ಪರದೆ ಸರಿದಾಗ, ಒಂದು ಕಥಾಸಂಕಲನ ಅವರ ಇಚ್ಛೆಯಂತೆಯೇ ಪುಸ್ತಕವಾಗಿ ಹೊರಬರಬೇಕು.. ಈಗಷ್ಟೇ ಐತಿಹಾಸಿಕ ಕಾದಂಬರಿ ರಕ್ತತಿಲಕ ಬರೆಯಲು ಶುರು ಮಾಡಿದ್ದು ಅದು ಅರ್ಧಕ್ಕೆ ನಿಂತದ್ದು ಬೇಸರದ ಸಂಗತಿ..! 

ಎಲ್ಲರೊಡನೆ ನೀರಿನಂತೆ ಆಪ್ತವಾಗಿ ಬೆರೆಯುತ್ತಿದ್ದ ಅವರು ಶುಭವನ್ನೇ ಬಯಸುವ ನಿಷ್ಕಲ್ಮಶ ಹೃದಯಿ! ನಿನ್ನ ಬೆಳವಣಿಗೆ ನಾನು ನೋಡಬೇಕು.. ನೀನು ಅತಿ ಎತ್ತರದ ಸ್ಥಾನಕ್ಕೆ ತಲುಪಬೇಕು ಎನ್ನುವುದೇ ನನ್ನ ಹಾರೈಕೆ ಎನ್ನುತ್ತಿದ್ದ ಅವರ ಮಾತು ಇಂದಿಗೂ ನನ್ನ ಕಿವಿಯಲ್ಲಿ ಹಾಗೆಯೇ ಇದೆ.. ನೀವು ತೋರಿಸಿದ ಹಾದಿಯಲ್ಲಿ ನಡೆಯುವ ಪ್ರಯತ್ನ ಖಂಡಿತ ಇದೆ..

ವಿಪರ್ಯಾಸವೆಂದರೆ ತಮ್ಮ ಕಾದಂಬರಿ ಓದುಗರನ್ನು ತಲುಪುವ ಮೊದಲೇ ಅನಾರೋಗ್ಯಕ್ಕೆ ತುತ್ತಾದ ಅವರು ಪುಸ್ತಕಕ್ಕೆ ಬಂದ ವಿಮರ್ಶೆಗಳನ್ನು ನೋಡದೆ ಹೋದದ್ದು  ಖೇದಕರ! ಅವರ ಮರಣ ನಂತರವೂ ಅವರ ಸಾಹಿತ್ಯಯಾನ ನಿಲ್ಲದೆ ಇರಲಿ ಎಂಬುದೇ ನಮ್ಮಂತ ಓದುಗರ ಬಯಕೆ.. ಅವರ ಪುಸ್ತಕಗಳು ಹೊರಬಂದು ಓದುಗರ ಮನವನ್ನು ತಣಿಸಲಿ..

ಅವರಿಂದು ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಅವರ ಕಲೆ, ಸಾಹಿತ್ಯ, ಸೇವೆಯ ಮೂಲಕ ಬೆಳಕಿನ ಕಿರಣವಾಗಿ ಎಂದಿಗೂ ಅಮರ!

                       ನಂದಾದೀಪ, ಮಂಡ್ಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...