ವಿಷಯಕ್ಕೆ ಹೋಗಿ

ಯಾಕೆ ಬರೆಯಬೇಕು?! - ಭಾನುವಾರದ ಕವಿತೆ - ಅನಂತ ಕುಣಿಗಲ್


ಯಾಕೆ ಬರೆಯಬೇಕು??

ಬರೆಯಬೇಕು
ಮನರಂಜನೆಗಾಗಿ..
ಬಿಡುವಿಲ್ಲದೆ ದುಡಿದು
ಹಣ್ಣಾಗುವವರ ಶ್ರೇಯಕ್ಕೆ
ವಿಶ್ರಾಂತಿ ಕೊಡಲು
ಬರೆಯಲೇಬೇಕು

ಬರೆಯಬೇಕು
ಸಂಸ್ಕೃತಿಯ ಉಳಿಸಲು
ಹಿಂದೆ ನೋಡದೆ ನುಗ್ಗುತ್ತಿರುವ
ತ್ವರಿತ ವೇಗದ ನಾಗರೀಕತೆಯಲ್ಲಿ
ಆಗಾಗ ಬೇಕೆನಿಸುವ ವಿರಾಮಕ್ಕಾಗಿ
ಬರೆಯಲೇಬೇಕು

ಬರೆಯಬೇಕು
ಇತಿಹಾಸವ ತಿಳಿಸಲು
ತಿಳಿಯದ ಸತ್ಯವ ತಿಳಿಸಲು
ಅಂಧರಿಗೆ ದಾರಿ ಕಾಣಿಸಲು
ಅಧ್ಯಯನದ ಮಹತ್ವವ ಸಾರಲು
ಬರೆಯಲೇಬೇಕು

ಬರೆಯಬೇಕು
ಮಾಹಿತಿಯ ಕಲೆಹಾಕಲು
ಜ್ಞಾನ ಸಂಪತ್ತನ್ನು ಹೆಚ್ಚಿಸಲು
ಪ್ರತಿಭೆಗಳ ಗುರುತಿಸಿ
ಆಡಂಬರವ ತೊಳೆಯಲು
ವಿಜ್ಞಾನದ ಅರಿವಿಗಾಗಿ
ತಂತ್ರಜ್ಞಾನದ ಮಿತಿಯ ಗುರುತಿಗಾಗಿ
ಬರೆಯಲೇಬೇಕು


ಬರೆಯಬೇಕು
ಮೂಢತೆಯನ್ನು ಕಿತ್ತೊಗೆಯಲು
ಅತಿಮಾನುಷ ಕೃತ್ಯಗಳಿಂದ
ಮಾನುಷ ವೀರ್ಯವ ರಕ್ಷಿಸಲು
ಜಾತಿ-ಪಂಗಡಗಳ ಮೀರಿ ಬದುಕಲು
ಸಾಮರಸ್ಯವ ಸಾರಿ ಸಮಾನತೆಯ ಹಂಚಲು
ಬರೆಯಲೇಬೇಕು

ಬರೆಯಬೇಕು
ಪ್ರಗತಿಶೀಲ ಬೆಳವಣಿಗೆಗಾಗಿ
ನೈತಿಕತೆ-ತಾತ್ವಿಕತೆಯ ನೆಲೆಗಟ್ಟಿನಲ್ಲಿ
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಸೋಸಿ
ಸಮಾಜದ ಸ್ವಾಸ್ಥ್ಯ ಕಟ್ಟಲು
ಎಲ್ಲರನ್ನು ಎಚ್ಚರಿಸಲು
ನಿದ್ರೆಯಿಂದ ಜಾಗೃತಗೊಳಿಸಲು
ಬರೆಯಲೇಬೇಕು

ಬರೆಯಬೇಕು
ಕೊನೆಯದಾಗಿ ಭಾವನೆಗಳ
ಹೊರ ಚೆಲ್ಲಿ.. ಜಗವ ಅಪ್ಪಲು
ತನ್ನ ಪ್ರತಿಬಿಂಬವ ಕಂಡು
ತನ್ನನ್ನೇ ತಿದ್ದುಕೊಳ್ಳುವ
ಆತ್ಮಾವಲೋಕನದ ಹುಡುಕಾಟಕ್ಕಾಗಿ
ಸಾವಧಾನದಿಂದ ಬರೆಯಲೇಬೇಕು
ಸಂಯಮವಿಲ್ಲದೆ ಸುಮ್ಮನೆ
ಯಾರನ್ನೋ ಮೆಚ್ಚಿಸಲಿಕ್ಕಾಗಿ
ಯಾಕೆ ಬರೆಯಬೇಕು?!


                           ಅನಂತ ಕುಣಿಗಲ್
               ಯುವಬರಹಗಾರ & ರಂಗಕಲಾವಿದ
            ananthangowda97@gmail.com

ಕಾಮೆಂಟ್‌ಗಳು

  1. ಬರೆಯಬೇಕು
    ಬಂಧಿಯಾದ ಬಂಧನಗಳ ಬಂಧಮುಕ್ತಗೊಳಿಸಲು..
    ಸ್ವಾತಂತ್ರದ ಹುಚ್ಚು ಕಿಚ್ಚ ಚಿಲುಮೆ ಚಿಮ್ಮಿಸಲು
    ಒಡಲಾಳದಿಂದ ಭರವಸೆಯ ಜ್ಯೋತಿ ಹಚ್ಚಲು

    ಬರೆಯಬೇಕು
    ಅಸಮಾನತೆಯ ಸಮಾಧಿ ಗೋರಿಯ ಮೇಲೆ
    ಸಮಾನತೆಯ ಬಿಳಿಯ ಧ್ವಜ ಏರಿಸಲು
    ಅನಕ್ಷರತೆಯ ಅಧಃಪತನದ ಅಡಿಯಿಂದ ಅಕ್ಷರತೆ, ಸಾಕ್ಷರತೆಯ ವಿಜಯಕಹಳೆ ಮೊಳಗಿಸಲು.

    ಬರೆಯಬೇಕು
    ಅಜ್ಞಾನವನು ಸುಟ್ಟು, ಜ್ಞಾನದ ಯಜ್ಞವ ಕೈಗೊಳ್ಳಲು.
    ಜ್ಞಾನದ ವೃಕ್ಷವ ಬೆಳೆಸಿ, ವಿಜ್ಞಾನ , ತಂತ್ರಜ್ಞಾನದ ಫಲವ ಉಣ್ಣಲು
    ಮಾನವ ತತ್ವವ ಈ ಲೋಕಕ್ಕೆ ಸಾರಲು.....

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...